ಮಹಿಳಾ ಅಧ್ಯಯನ ವಿಭಾಗ ಮತ್ತು ಕೇಂದ್ರ, ರಾಷ್ಟ್ರೀಯ ಮಹಿಳಾ ಆಯೋಗ, ನವದೆಹಲಿ
ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು. ಇವರ ಸಹಯೋಗದಲ್ಲಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ
ಮಹಿಳಾ ಕಾನೂನು ಅರಿವು ಕಾರ್ಯಕ್ರಮ
ಸ್ವಾವಲಂಬನೆ ಬದುಕು ನಮ್ಮದಾಗಲಿ : ಪ್ರಮೀಳ ನಾಯ್ಡು
ವಿದ್ಯೆ ಮತ್ತು ಸ್ವಾವಲಂಬನೆ ಮಹಿಳೆಯರ ಮೊದಲ ಆದ್ಯತೆಯಾಗಬೇಕು. ಇದು ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕಲು ನೆರವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷರಾದ ಪ್ರಮೀಳ ನಾಯ್ಡು. ಆರ್ ಅವರು ಅಭಿಪ್ರಾಯ ಪಟ್ಟರು
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಂಭಾಗಣದಲ್ಲಿ ದಿನಾಂಕ: ೨೭.೩.೨೦೨೩ರಂದು ಮಹಿಳಾ ಅಧ್ಯಯನ ವಿಭಾಗ ಮತ್ತು ಕೇಂದ್ರ, ರಾಷ್ಟ್ರೀಯ ಮಹಿಳಾ ಆಯೋಗ, ನವದೆಹಲಿ. ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು. ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ಕಾನೂನು ಅರಿವು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತ ವೇದಗಳ ಕಾಲದಲ್ಲಿ ಮಹಿಳೆ ಮತ್ತು ಪುರು?ರು ಸಮಾನರಾಗಿದ್ದರು. ಆದರೆ ಕ್ರಮೇಣ ಇದು ಬದಲಾಗಿ ಲಿಂಗ ತಾರತಮ್ಯ ಭಾವನೆ ಹುಟ್ಟಿಕೊಂಡಿತು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಸಮಾನತೆಯ ವಿರುದ್ಧ ಹೋರಾಡಿ ಲಿಂಗ ಸಮಾನತೆಗೆ ಒತ್ತು ಕೊಟ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಸಂವಿಧಾನ ಮತ್ತು ಸರ್ಕಾರದಿಂದ ಹಲವು ರೀತಿಯ ಕಾನೂನು ಜಾರಿಗೆ ಬಂದಿವೆ. ಮಹಿಳಾ ಸಮಾನತೆ ತರುವಲ್ಲಿ ವಿಶೇಷವಾಗಿ ಹೋರಾಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಾವು ಇಲ್ಲಿ ಸ್ಮರಿಸಬೇಕು. ಮಹಿಳಾ ಆಯೋಗವು ಮಹಿಳೆಯರಿಗೆ ನ್ಯಾಯ ಒದಗಿಸಿ ಅವರನ್ನು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಅಶೋಲಿ ಚಲೈ ಅವರು ಮಾತನಾಡುತ್ತ ಪ್ರಸ್ತುತ ಮಹಿಳೆಯರ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಮಹಿಳಾ ಸಮಾನತೆ ಕುರಿತು ಅಗತ್ಯವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸುಧಾರಣೆ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು. ಪ್ರಮುಖವಾಗಿ ರಾಷ್ಟ್ರೀಯ ಮಹಿಳಾ ಆಯೋಗವು ರಾಜ್ಯದ ಎಲ್ಲಾ ಮಹಿಳಾ ಆಯೋಗದೊಂದಿಗೆ ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಕಾನೂನು ಎಂಬ ವಿಶೇಷ ಉಪನ್ಯಾಸದಲ್ಲಿ ಹೊಸಪೇಟೆಯ ವಕೀಲರಾದ ಡಾ. ಭಾಗ್ಯಲಕ್ಷ್ಮಿ ಭರಾಡೆ ಅವರು ಮಾತನಾಡುತ್ತ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ವಿ?ಯ ಪುರಾತನ ಕಾಲದಿಂದಲೂ ಪ್ರಸ್ತುತ ದಿನಗಳವರೆಗೂ ಜ್ವಲಂತ ಸಮಸ್ಯೆಯಾಗಿದೆ. ಪ್ರೀತಿ, ಪ್ರೇಮ, ಉದ್ಯೋಗ ಎನ್ನುವ ಆಮಿಷಗಳಿಗೆ ಒಳಗಾಗಿ ಮಹಿಳೆಯರು ನಾಪತ್ತೆಯಾಗುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಯೂ ಹೆಚ್ಚಾಗಿದೆ. ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಸರ್ಕಾರದ ಕಾನೂನುಗಳ ಜೊತೆಗೆ ಜನರ ಸಹಕಾರವು ಮುಖ್ಯ. ಈ ವಿಷಯದಲ್ಲಿ ಯುವತಿಯರಿಗೆ ಮಾತ್ರವಲ್ಲ ಯುವಕರಿಗೂ ಅರಿವು ಮೂಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ನಿಷೇಧ ಕಾನೂನು ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತ ಮಾದಕ ವಸ್ತುಗಳ ಸೇವನೆ ಎನ್ನುವಂತದ್ದು ಬಹಳ ಹಿಂದಿನಿಂದಲೂ ಕಾಣಬಹುದು. ಪ್ರಸ್ತುತ ಮಾದಕ ವಸ್ತುಗಳ ಆಕ್ರಮ, ಮಾರಾಟ, ಉತ್ಪಾದನೆಗೆ ಕಡಿವಾಣ ಹಾಕಲು ಕಾನೂನಿನಲ್ಲಿ ಹಲವು ಕಾಯಿದೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತ ಭಾರತೀಯ ಸಂಸ್ಕೃತಿಯು ನಂಬಿಕೆಯ ತಳಹದಿಯ ಮೇಲೆ ಸಮಾಜ ನಿಂತಿದೆ. ಇಂದು ಮಾನವನ ದುರಾಸೆಯೇ ಅಕ್ರಮ ಚಟುವಟಿಕೆಗಳಿಗೆ ಮೂಲ ಕಾರಣವಾಗಿದೆ. ಇಂದಿನ ಯುವಕ-ಯುವತಿಯರು ಆಮಿಷಗಳಿಗೆ ಒಳಗಾಗಿ ತಮ್ಮ ಸುಂದರ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಕಾನೂನಿನ ಅರಿವು ಕುರಿತ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯಗಳಲ್ಲದೆ ಶಾಲೆ, ಕಾಲೇಜುಗಳಲ್ಲೂ ನಡೆಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಮಾತನಾಡಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಶಿವಾನಂದ ಎಸ್. ವಿರಕ್ತಮಠ ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಯರ್ರಿಸ್ವಾಮಿ ಈ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.